ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಿಂದ ಇಟಗಿ ಗ್ರಾಮವು ಮೂವತ್ತು ಕೀ.ಮೀ.ದೂರದಲ್ಲಿ ಇದೆ. ಕದಂಬರು ಆಳಿದಂತಹ ಈ ಊರಿನಲ್ಲಿ ಶ್ರೀ ರಾಮೇಶ್ವರ ದೇವಸ್ಥಾನವು ಹೆಸರುವಾಸಿ. ಇಟಗಿಯನ್ನು ಇಟ್ಗೆ, ಇಷ್ಠಿಕಾಪುರ ಎಂದು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಪಶ್ಚಿಮದ ಅನತಿ ದೂರದಲ್ಲಿರುವ ಇಟಗಿ ಗ್ರಾಮ ಕದಂಬರ ಕಾಲದಲ್ಲಿ ಐಸೂರು ಮತ್ತು ಬಿಳಗಿ ರಾಜಧಾನಿಯಾಗಿತ್ತು. ರಾಮೆಶ್ವರ ,ಅಮ್ಮನವರ ಗುಡಿ ಮತ್ತು ವಿಠ್ಠಲ ದೇವಾಲಯಗಳ ವಾಸ್ತುಶಿಲ್ಪವು ವಿಜಯನಗರ ಶೈಲಿಯಿಂದ ಕೂಡಿದೆ. == ರಾಮೇಶ್ವರ ದೇವಸ್ಥಾನ == ಈ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ಪ್ರಾಚೀನ ಆಲಯಗಳನ್ನು ಮತ್ತು ಚಂದ್ರಶಾಲೆಗಳನ್ನು ಹೊಂದಿದೆ. ಚಂದ್ರಶಾಲೆಯ ದ್ವಾರದಲ್ಲಿ ಗೋಪುರಗಳನ್ನು ರಚಿಸಲಾಗಿದೆ. ದೇವಸ್ಥಾನದ ಎದುರುಗಡೆಯಲ್ಲಿ ಬಲಿಪೀಠವಿದೆ. ಚಂದ್ರಶಾಲೆಯ ಪೂರ್ವದ್ವಾರವನ್ನು ಪ್ರವೇಶಿಸಿದರೆ ಶಿಲ್ಪ ದೇವಾಲಯಗಳು ಕಾಣ ಸಿಗುತ್ತದೆ. == ಅಮ್ಮನವರ ಗುಡಿ == ರಾಮೇಶ್ವರ ದೇವಾಲಯದ ಎಡಭಾಗದಲ್ಲಿ ಅಮ್ಮನವರ ದೇವಾಲವಿದೆ. ಈ ಗುಡಿಯನ್ನು ಸೀತಮ್ಮ ,ಪಾರ್ವತಿ ಎಂದು ಕರೆಯುತ್ತಾರೆ. ರಾಮೇಶ್ವರ ಮತ್ತು ಗೌರಿದೇವಾಲಯಗಳ ಬಾಗಿಲು ಮೇಲ್ಗಡೆಯ ಭಿತ್ತಿಯ ಭಾಗದಲ್ಲಿ ವಿಶಿಷ್ಟ ಬಗೆಯ ಕೆಲವು ಉಬ್ಬು ಶಿಲ್ಪಗಳಿದ್ದು ಏಕರೂಪತೆಯಿಂದ ಕೂಡಿದೆ. == ಶ್ರೀ ವಿಠ್ಠಲ ದೇವಾಲಯ == ರಾಮೇಶ್ವರ ದೇವಾಲಯದ ನೈರುತ್ಯಕ್ಕೆ ವಿಠ್ಠಲ ದೇವಾಲಯವಿದೆ. ರಾಮೇಶ್ವರ ಮತ್ತು ಅಮ್ಮನವರ ಗುಡಿ ಪೂರ್ವಕ್ಕೆ ಮುಖಮಾಡಿದರೆ, ವಿಠ್ಠಲ ದೇವಾಲಯದ ಮುಖವು ಉತ್ತರಕ್ಕಿದೆ. ಶಿಖರವನ್ನು ಹೊಂದಿರದ ಈ ದೇವಾಲಯದ ಸುತ್ತಲೂ ವೀರ ಮಾರುತಿ ಮತ್ಸ, ನಾಗ, ಮುಂತಾದ ಉಬ್ಬು ಶಿಲ್ಪಗಳನ್ನು ಹೊಂದಿದೆ. == ಉತ್ಸವಗಳು == ರಾಮೇಶ್ವರ ದೇವಸ್ಥಾನದಲ್ಲಿ ಸುಮಾರು ಒಂದು ವಾರ ಕಾಲ ಜಾತ್ರಾಮಹೋತ್ಸವ ಮತ್ತು ಎರಡು ದಿನಗಳ ಕಾಲ ರಥೋತ್ಸವ ನಡೆಯುತ್ತದೆ. ಅದನ್ನು ದೊಡ್ಡತೇರು ಮತ್ತು ಚಿಕ್ಕತೇರು ಎಂದು ಕರೆಯುತ್ತಾರೆ. ಉತ್ಸವದ ಅಂಗವಾಗಿ ಮುಂಚೆಯೇ ತೇರು ಕಟ್ಟುವ ಕೆಲಸ ಪ್ರಾರಂಭವಾಗುತ್ತದೆ. ಅದೂ ಕೂಡ ಮಡಿವಾಳ ಹಾಗೂ ವರ್ತೆಕೊಡ್ಲು ಅವರು ಮಾತ್ರ ತೇರು ಕಟ್ಟುವ ಸೇವೆಗೆ ನಿಯುಕ್ತರಾದವರು ಎಂಬುದು ಪ್ರತೀತಿ. ಉತ್ಸವದ ಸಮಯದಲ್ಲಿ ಪಲ್ಲಕ್ಕಿ, ವಾದ್ಯ, ಛತ್ರಿ ಹಿಡಿಯುವುದು, ತೋರಣ ಮುಂತಾದ ಕಾರ್ಯದ ಹೊಣೆಗಾರಿಕೆಯನ್ನು ಒಂದೊಂದು ಕುಟುಂಬ, ಊರು, ಗ್ರಾಮಗಳು ವಹಿಸಿಕೊಳ್ಳುತ್ತವೆ. ಚಂದ್ರಮಾನ ಯುಗಾದಿ, ವಸಂತಮಹೋತ್ಸವ, ಉಪಾಕರ್ಮ, ಗಣೇಶ ಚೌತಿ, ನವರಾತ್ರಿ, ಗಂಗಾಷ್ಠಮಿ, ಮಹಾಶಿವರಾತ್ರಿ ಇತರೆ ಉತ್ಸವಗಳನ್ನು ಈ ಸನ್ನಿಧಿಯಲ್ಲಿ ಆಚರಿಸುತ್ತಾರೆ. ಈ ಸನ್ನಿಧಿಯು ಹಗಲು ಉತ್ಸವ, ರಾತ್ರಿ ಉತ್ಸವದಿಂದ ಪ್ರಸಿದ್ಧಿ ಪಡೆದಿದೆ. == ಉಲ್ಲೇಖಗಳು ==